ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ
ರೈತರ ಬೆಳೆಹಾನಿಗೆ ನೀಡಲಾಗುವ ಪರಿಹಾರವನ್ನು ಒಂದು ಲಕ್ಷ ರೂಪಾಯಿಗಳಿಗೆ ಏರಿಸಿ ಸರ್ಕಾರ ಆದೇಶಿಸಿದೆ. ಯಾವ್ಯಾವ ಬೆಳೆಗೆ ಎಷ್ಟೆಷ್ಟು ಪರಿಹಾರ? ರೈತರ ಬೇಡಿಕೆಗಳೇನು? ಇತ್ಯಾದಿ ಮಾಹಿತಿ ಇಲ್ಲಿದೆ…
ಕಾಡುಪ್ರಾಣಿಗಳಿಂದ ರೈತರು ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಕಾಡಾನೆ, ಮಂಗ, ಜಿಂಕೆ, ನವಿಲು, ಕಾಡಂದಿ, ಕಡವೆ, ಕಾಡುಕೋಣಗಳ ಹಾವಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿನ್ನಲೆಯಲ್ಲಿ ಸರಕಾರ ಕಾಡುಪ್ರಾಣಿಗಳಿಂದ ಸಂಭವಿಸುವ ಹಾನಿಗೆ ನೀಡಲಾಗುವ ಪರಿಹಾರವನ್ನು 1 ಲಕ್ಷ ರೂಪಾಯಿಗಳಿಗೆ ಏರಿಸಿ ಸರ್ಕಾರ ಆದೇಶಿಸಿದೆ.
ರೈತರು ವರ್ಷಗಳಿಂದ ಜತನ ಮಾಡಿಕೊಂಡು ಬಂದ ತೋಟಗಳು ಕಾಡು ಪ್ರಾಣಿಗಳ ಹಾವಳಿಗೆ ಸರ್ವನಾಶವಾಗುತ್ತಿವೆ. ಅಡಿಕೆ, ತೆಂಗು, ಬಾಳೆ ಸಹಿತ ರೈತರು ಕಷ್ಟಪಟ್ಟು ಬೆಳೆಸಿದ ಬೆಳೆಗಳಿಗೆ ಕಾಡುಪ್ರಾಣಿಗಳು ಹಿಂಡುಹಿಂಡಾಗಿ ಲಗ್ಗೆ ಇಟ್ಟು ಹಾಳು ಮಾಡುತ್ತಿವೆ. ಕಾಡುಪ್ರಾಣಿಗಳಿಂದ ರೈತರು ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಹೀಗಾದರೆ ಕೃಷಿ ಜೀವನ ಕಷ್ಟದಾಯಕವಾಗುತ್ತದೆ ಎಂಬುದು ರೈತರ ಅಳಲು.
ಬಂದೂಕು ಪರವಾನಿಗೆ ಆಗ್ರಹ ತೆಂಗು, ಅಡಿಕೆ, ತರಕಾರಿ, ಬಾಳೆ, ಭತ್ತವನ್ನು ಮಂಗಗಳು ಹಾನಿ ಮಾಡುತ್ತವೆ.
ಬೇಸಾಯ ಮಾಡಲು ಸಿದ್ಧ ಮಾಡಿರುವ ನೇಜಿ, ದನಗಳಿಗೆ ಮೇಯಲು ಬೆಳೆಸಿರುವ ಹುಲ್ಲು, ಬೆಳೆದ ಭತ್ತದ ಪೈರು ಎಲ್ಲವನ್ನೂ ಜಿಂಕೆಗಳು ತಿಂದು ನಾಶ ಮಾಡುತ್ತವೆ.
ಕಡವೆಗಳು ಹಿಂಡಾಗಿ ಬಂದು ಭತ್ತ, ಅಡಿಕೆ, ತೆಂಗು, ಬಾಳೆ ಗಿಡಗಳನ್ನೇ ತಿಂದು ನಾಶಪಡಿಸುತ್ತ್ತವೆ. ಕಾಡುಕೋಣಗಳು ಬಹುತೇಕ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡುತ್ತಿವೆ.
ನವಿಲುಗಳ ಕಾಟ ಇತ್ತೀಚೆಗೆ ವ್ಯಾಪಕವಾಗಿದೆ
. ತರಕಾರಿ ಗಿಡ, ಹೂವು ಎಲ್ಲವನ್ನೂ ನಾಶಪಡಿಸುತ್ತವೆ. ಇದರಿಂದ ಬೇಸತ್ತ ರೈತರು ಕಾಡುಪ್ರಾಣಿಗಳಿಂದ ಆದ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಪ್ರತಿ ರೈತನಿಗೆ ಎಕರೆಗೆ ಮೂರು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ರೈತರಿಗೆ ಯಾವ ಷರತ್ತು ಇಲ್ಲದೆ ಬಂದೂಕು ಪರವಾನಗಿ ನೀಡಬೇಕು ಎಂಬುವುದು ಬಹಳಷ್ಟು ರೈತರ ಆಗ್ರಹವಾಗಿತ್ತು.
1 ಲಕ್ಷ ರೂಪಾಯಿ ಪರಿಹಾರ ರೈತರ ಅಳಲು ಮತ್ತು ಆಗ್ರಹಕ್ಕೆ ಸ್ಪಂದಿಸಿದ ಸರಕಾರ ಕಾಡುಪ್ರಾಣಿಗಳಿಂದ ಉಂಟಾದ ಬೆಳೆ ಹಾನಿಗೆ ನೀಡುವ ಪರಿಹಾರದ ಗರಿಷ್ಠ ಮೊತ್ತವನ್ನು 50 ಸಾವಿರ ರೂಪಾಯಿಗಳಿಂದ 1 ಲಕ್ಷ ರೂಪಾಯಿಗಳಿಗೆ ಏರಿಸಿ ಆದೇಶಿಸಿದೆ. ಇದರಿಂದ ರೈತರ ಬಹುಕಾಲದ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ. ವನ್ಯಪ್ರಾಣಿಗಳಿಂದ ಉಂಟಾಗುವ ಜಾನುವಾರುಗಳ ಪ್ರಾಣ ಹಾನಿ ಮತ್ತು ಬೆಳೆ ಹಾನಿಗೆ ಪರಿಹಾರ ಹೆಚ್ಚಿಸುವ ಮೂಲಕ ಸರ್ಕಾರ ಮತ್ತು ಅರಣ್ಯ ಇಲಾಖೆ ಗ್ರಾಮೀಣ ಜನರಿಗೆ ನೆರವಾಗಿದೆ.
ಯಾವ್ಯಾವ ಬೆಳೆಗಳಿಗೆ ಪರಿಹಾರ?
ಈ ಪರಿಹಾರ ಮೊತ್ತವು ಆಯ್ದ 64 ಬೆಳೆಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಸರಕಾರ ಆದೇಶದಲ್ಲಿ ತಿಳಿಸಿದೆ.
ಅಡಿಕೆ, ತೆಂಗು, ಮಾವು, ಭತ್ತ, ರಾಗಿ, ನೆಲಗಡಲೆ, ಟೊಮ್ಯಾಟೊ, ಹಿಪ್ಪುನೇರಳೆ ಸೇರಿ 64 ಬೆಳೆಗಳ ಪರಿಹಾರ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಈ ಬಗೆಗಿನ ಸಮಗ್ರ ವಿವರ ಇನ್ನು ಮೇಲಷ್ಟೇ ಹೊರಬೀಳಬೇಕಿದೆ.